Tuesday, March 19, 2013

ದಾರಿಗಳು


ದಾರಿಗಳು

           ಹೆಜ್ಜೆ ಹಾಕುತ್ತಿದ್ದೆ 
           ಅದೇ ದಾರಿಹೋಕರೊಂದಿಗೆ 
           ಅದು ಅಂದು ತಿಳಿದಿದ್ದ 
           ನೇರ ದಾರಿ                          
     
          ದಾರಿಹೋಕರ ಒಂದು ದಂಡು                      
          ಬೇರೆ ದಾರಿ ಹಿಡಿದಿತ್ತು 
          ತಡವಾದರೂ ತಲುಪುವ 
          ಡೊಂಕಾದ ದಾರಿ 

          ನೇರ ದಾರಿಯಿಂದ ಬೇರ್ಪಟ್ಟು 
          ಜಾಣರು ಕೆಲವರು 
          ಕಂಡಿದ್ದು ಕಿರಿದಾದ 
          ಒಳ ದಾರಿ 

          ನೇರ ದಾರಿ 
          ಡೊಂಕಾದ ದಾರಿ 
          ಒಳ ದಾರಿ 
          ಈ ಎಲ್ಲವ ಬಿಟ್ಟು 
          ಮಾಡಿಕೊಂಡೆ 
          ಹೊಸ ದಾರಿ 

        ಅಬ್ಬಾ ...!
        ನಾ ಹಿಡಿದ ದಾರಿಯ ತುಂಬಾ 
        ಬೆಂಬೆತ್ತಿ ಬಂದಿದೆ 
        ಜೈಕಾರವ ಕೂಗಿ ದಂಡು 

        ಸರಿದು ಬದಿಗೆ ನಿಲ್ಲಲೇ 
        ಮುಂದೆ ನಡೆ ನಡೆದು 
        ನಿನ್ನ ಕದವ ತಟ್ಟಲೇ ?

                              - ಅವನೀಂದ್ರನಾಥ್ ರಾವ್  

Sunday, March 17, 2013

ಬಹುರೂಪ: ದಿಲ್ಲಿಯಲ್ಲೊಂದು ಕನ್ನಡದ ಗುರುತು

vijaya karnataka
ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಕಾರ್ಯದರ್ಶಿಯಾಗಿದ್ದ ಶ್ರೀಮತಿ ಉಷಾ ಮಲ್ಲಿಕ್ ಅವರ ಬಗ್ಗೆ ನನಗೆ ಅಪಾರ ಗೌರವ. ಅವರು ಡಾ.ಶಿವರಾಮ ಕಾರಂತರ ಯಕ್ಷಗಾನ ತಂಡವನ್ನು ಬಹಳ ಮುತುವರ್ಜಿ ವಹಿಸಿ ವಿದೇಶಕ್ಕೆ ಕಳಿಸಿಕೊಟ್ಟದ್ದು ಅದಕ್ಕೆ ಕಾರಣ. ಕಾರಂತರು ತಮ್ಮ ಪ್ರವಾಸ ಕಥನಗಳಲ್ಲಿ ಅವರ ನೆರವನ್ನು ವಿಶೇಷವಾಗಿ ನೆನಪಿಸಿಕೊಂಡಿದ್ದಾರೆ. ಒಂದು ದಿನ ಶ್ರೀಮತಿ ಮಲ್ಲಿಕ್ ಅವರ ದೂರವಾಣಿ ಕರೆ ಮಾಡಿ- 'ದಿಲ್ಲಿಯ ಇಂಡಿಯಾ ಗೇಟ್‌ನಿಂದ ಐಟಿಓ ಕಡೆ ಹೋಗುತ್ತಿದ್ದಾಗ ಸಿಗುವ ಕೆಂಪು ದೀಪದ ಸನಿಹ ಎಡಕ್ಕೆ ತಿರುಗಿದರೆ ದೀನ ದಯಾಳ ಉಪಾಧ್ಯಾಯ ಮಾರ್ಗ ದೊರಕುತ್ತದೆ. ಈ ಮಾರ್ಗದಲ್ಲಿ ಸ್ವಲ್ಪ ಮುಂದೆ ಹೋದರೆ ಬಲ ಬದಿಗೆ ಸಿಗುವ 5ನೇ ನಂಬರಿನ ಮನೆಯೇ ಯು. ಶ್ರೀನಿವಾಸ ಮಲ್ಯ ಮೆಮೋರಿಯಲ್ ಥಿಯೇಟರ್ ಕ್ರಾಫ್ಟ್ ಮ್ಯೂಸಿಯಂ. ಕನ್ನಡಿಗರೊಬ್ಬರ ಹೆಸರಿನಲ್ಲಿರುವ ಈ ವಸ್ತು ಸಂಗ್ರಹಾಲಯವನ್ನು ಕಟ್ಟಿ ಬೆಳೆಸಿದವರು ಇನ್ನೊಬ್ಬ ಕನ್ನಡಿಗರಾದ ಕಮಲಾದೇವಿ ಚಟ್ಟೋಪಾಧ್ಯಾಯರು. ಒಮ್ಮೆ ನೋಡಲು ಬನ್ನಿ' ಎಂದರು. ಅವರ ಆಹ್ವಾನವನ್ನು ತಕ್ಷಣ ಒಪ್ಪಿಕೊಂಡೆ. ದಿಲ್ಲಿಯಲ್ಲಿ ಕರ್ನಾಟಕದ ಪ್ರತಿನಿಧೀಕರಣ ಬಹಳ ದುರ್ಬಲವಾಗಿರುವ ಸಂದರ್ಭದಲ್ಲಿ ಈ ಆಹ್ವಾನ ಮುಖ್ಯವೆನಿಸಿತು.

ದಿಲ್ಲಿಯ ಬಹಳ ಮುಖ್ಯ ಜಾಗದಲ್ಲಿರುವ ಆ ವಸ್ತು ಸಂಗ್ರಹಾಲಯಕ್ಕೆ ಉಳ್ಳಾಲ ಶ್ರೀನಿವಾಸ ಮಲ್ಯರ ( ಜನನ: ನವೆಂಬರ್ 21, 1902, ಮರಣ ಜನವರಿ 19, 1965) ಹೆಸರಿಡಲಾಗಿದೆ. ಶ್ರೀ ಮಲ್ಯರು ಆಧುನಿಕ ದಕ್ಷಿಣ ಕನ್ನಡ ಜಿಲ್ಲೆಯ ನಿರ್ಮಾತೃ. 18 ವರ್ಷಗಳ ಕಾಲ (1945-1965) ಸಂಸದರಾಗಿದ್ದ ಅವರು ಕರಾವಳಿ ಜಿಲ್ಲೆಗಳನ್ನು ದೇಶದ ಇತರ ಭಾಗಗಳೊಂದಿಗೆ ಜೋಡಿಸಿದ ಬಹುದೊಡ್ಡ ಯೋಜನೆಗಳನ್ನು ಜಾರಿಗೆ ತಂದವರು. ರಾಷ್ಟ್ರೀಯ ಹೆದ್ದಾರಿಗಳಾದ 17 ( ಮುಂಬಯಿ-ಕೊಚ್ಚಿ ) ಮತ್ತು 48 (ಮಂಗಳೂರು-ಬೆಂಗಳೂರು ) ಕೂಡಾ ಅವರ ಕನಸುಗಳು. ನೇತ್ರಾವತಿ ನದಿಗೆ ಉಳ್ಳಾಲದಲ್ಲಿ ಸೇತುವೆ ನಿರ್ಮಾಣ, ನವಮಂಗಳೂರು ಬಂದರು, ಸುರತ್ಕಲ್ ಎಂಜಿನಿಯರಿಂಗ್ ಕಾಲೇಜು, ಮಂಗಳೂರು ಪುರಭವನ, ಬಜ್ಪೆ ವಿಮಾನ ನಿಲ್ದಾಣ, ಮಂಗಳೂರು ಆಕಾಶವಾಣಿ ಮತ್ತಿತರವುಗಳ ಸ್ಥಾಪನೆಯಲ್ಲಿ ಮಹತ್ವದ ಪಾತ್ರ ಅವರದು.

ತಮ್ಮ 18ನೇ ವರ್ಷದಲ್ಲಿ ಕಾಲೇಜು ತೊರೆದು ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ ಶ್ರೀನಿವಾಸ ಮಲ್ಯರು ಮುಂದೆ ಎಲ್ಲವನ್ನೂ ತೊರೆದು ಗಾಂಧಿ ಅನುಯಾಯಿಗಳಾದರು. ಸ್ವಾತಂತ್ರ್ಯ ದೊರಕುವ ಹೊತ್ತಿಗೆ ನೆಹರೂ ಅವರಿಗೆ ಹತ್ತಿರವಾಗಿದ್ದ ಅವರ ಆಧುನಿ ಕತೆಯ ಪರವಾದ ಯೋಚನೆಗಳು ಮತ್ತು ಯೋಜನೆಗಳು ನೆಹರೂ ಅವರಿಗೆ ಸಹಜವಾಗಿ ಆಪ್ತವಾಗಿತ್ತು. 1951 ರ ಹೊತ್ತಿಗೆ ಅವರು ಇನ್ನೊಬ್ಬ ಮಂಗಳೂರಿಗರಾಗಿದ್ದ ಕಮಲಾದೇವಿ ಚಟ್ಟೋಪಾಧ್ಯಾಯರಿಗೂ ಆಪ್ತರಾಗಿದ್ದರು. ಕಲೆ, ಸಾಹಿತ್ಯ, ಸಂಗೀತ ಗಳಲ್ಲಿ ಸಮಾನ ಆಸಕ್ತಿ ಹೊಂದಿದ್ದ ಅವರಿಬ್ಬರೂ ನಾಡಿನ ಕಲಾ ಸಂರಕ್ಷಣಾ ಕೆಲಸಗಳಲ್ಲಿ ಜತೆ ಜತೆಯಾಗಿ ಕೆಲಸ ಮಾಡಿದ್ದು ವಿಶೇಷ ಘಟನೆ.

ಕಮಲಾದೇವಿ ಚಟ್ಟೋಪಾಧ್ಯಾಯರೂ ಮಂಗಳೂರಿನವರೇ. ( ಜನನ ಎಪ್ರಿಲ್ 3, 1903, ಮರಣ ಅಕ್ಟೋಬರ್ 29, 1988). 14 ನೇ ವರ್ಷದಲ್ಲಿ ಅವರಿಗೆ ಕೃಷ್ಣ ರಾವ್ ಅವರೊಂದಿಗೆ ಮದುವೆಯಾದರೂ 16ನೇ ವರ್ಷಕ್ಕೆ ಅವರು ವಿಧವೆಯಾದರು. ಸಂಪ್ರದಾಯದ ಗಡಿರೇಖೆಗಳನ್ನು ದಾಟಿ ನಿಂತ ಅವರು ಮುಂದೆ ಮದರಾಸಿನಲ್ಲಿ ಓದುತ್ತಿದ್ದಾಗ ಪರಿಚಯವಾದ ಹರೀಂದ್ರನಾಥ ಚಟ್ಟೋಪಾಧ್ಯಾಯರನ್ನು ಮದುವೆಯಾದರು. ಹೀಗಾಗಿ ಅವರ ಹೆಸರಿಗೆ 'ಚಟ್ಟೋಪಾಧ್ಯಾಯ' ಸೇರಿಕೊಂಡಿತು. ಕಮಲಾದೇವಿಯಯವರು ಕೂಡಾ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಸಾಮಾಜಿಕ ಕಾರ್ಯಕರ್ತೆ. ಭಾರತೀಯ ಕರಕುಶಲ ಕಲೆಗಳ ಸಂರಕ್ಷಣೆಗೆ ಸಂಬಂಧಿಸಿದ ಹಾಗೆ ಅವರು ಮಾಡಿದ ಕೆಲಸಗಳು ಚಾರಿತ್ರಿಕವಾದುವು. ಇಂದು ಪ್ರಖ್ಯಾತವಾಗಿರುವ, ರಾಷ್ಟ್ರೀಯ ನಾಟಕ ಶಾಲೆ ( ಎನ್ ಎಸ್ ಡಿ), ಸಂಗೀತ ನಾಟಕ ಅಕಾಡೆಮಿ, ಸೆಂಟ್ರಲ್ ಕಾಟೀಜ್ ಇಂಡಸ್ಟ್ರೀಸ್ ಎಂಪೋರಿಯಮ್, ಕ್ರಾಫ್ಟ್ ಕೌನ್ಸಿಲ್ ಇಂಡಿಯಾಗಳನ್ನು ಕಮಲಾದೇವಿ ಅವರೇ ಸ್ಥಾಪಿಸಿದರು.

ಕಮಲಾದೇವಿ ಅವರು ಅಧ್ಯಕ್ಷರಾಗಿದ್ದ 'ಇಂಡಿಯನ್ ನ್ಯಾಶನಲ್ ಥಿಯೇಟರ್' ಮೇ 5, 1944 ರಂದು ಅಸ್ತಿತ್ವಕ್ಕೆ ಬಂತು. 1949ರಲ್ಲಿ ಅವರು ಭಾರತೀಯ ನಾಟ್ಯ ಸಂಘವನ್ನು ಹುಟ್ಟು ಹಾಕಿದರು. ಈ ಸಂಘವನ್ನು ಯುನೆಸ್ಕೊ ಅಫಿಲಿಯೇಟ್ ಮಾಡಿಕೊಂಡಿತು. ಉಳ್ಳಾಲ ಶ್ರೀನಿವಾಸ ಮಲ್ಯರು ಭಾರತೀಯ ನಾಟ್ಯ ಸಂಘದ ಏಳಿಗೆಗಾಗಿ ದುಡಿದರು. 1965ರ ಡಿಸೆಂಬರ್‌ನಲ್ಲಿ ಮಲ್ಯರು ದಿಲ್ಲಿಯಲ್ಲಿ ತೀರಿಕೊಂಡಾಗ, ಅವರ ಅಭಿಮಾನಿಗಳೆಲ್ಲ ಸೇರಿ 'ಶ್ರೀನಿವಾಸ ಮಲ್ಯ ಮೆಮೋರಿಯಲ್ ಕಮಿಟಿ'ಯೊಂದನ್ನು ಹುಟ್ಟುಹಾಕಿದರು. ಈ ಕಮಿಟಿಯು ಮುಂದೆ 'ಶ್ರೀನಿವಾಸ ಮಲ್ಯ ಮೆಮೋರಿಯಲ್ ಥಿಯೇಟರ್ ಕ್ರಾಫ್ಟ್ ಟ್ರಸ್ಟ್ ' ನ್ನು ಸ್ಥಾಪಿಸಿ, ಕಲಾಸಂರಕ್ಷಣೆ ಮಾಡುವ, ದೇಶದ ಎಲ್ಲೆಡೆಗಳಲ್ಲಿ ಥಿಯೇಟರ್ ಚಟುವಟಿಕೆಗಳ ಜತೆಗೆ ಸಂಶೋಧನೆ ಮಾಡುವ ಮಹತ್ವದ ಯೋಜನೆಗಳನ್ನು ಹಾಕಿಕೊಂಡಿತು. ಈ ಥಿಯೇಟರ್ ಕ್ರಾಫ್ಟ್ ಮ್ಯೂಸಿಯಂ ಸ್ಥಾಪನೆಯಾಗುತ್ತಿದ್ದಂತೆ ಕಮಲಾದೇವಿ ಚಟ್ಟೋಪಾಧ್ಯಾಯರು ತಾವು ಅಧ್ಯಕ್ಷರಾಗಿದ್ದ 'ಭಾರತೀಯ ನಾಟ್ಯ ಸಂಘ'ದ ಸಂಗ್ರಹಗಳನ್ನೆಲ್ಲ ಅದಕ್ಕೆ ದಾನ ಮಾಡಿದರು. ಇಂದು ಮ್ಯೂಸಿಯಂನಲ್ಲಿ ಇರುವ ಅಪೂರ್ವ ವಸ್ತುಗಳೆಲ್ಲ ಹೀಗೆ ಕಮಲಾ ದೇವಿ ಅವರಿಂದ ಕೊಡುಗೆಯಾಗಿ ಬಂದಿರುವಂತಹದು.
ಬಹುರೂಪ: ದಿಲ್ಲಿಯಲ್ಲೊಂದು ಕನ್ನಡದ ಗುರುತು
ಕಮಲಾದೇವಿ ಅವರು ಮೂಲತಃ ಮಂಗಳೂರಿನವರಾದ್ದರಿಂದ ಅವರ ಸಂಗ್ರಹದಲ್ಲಿ ಕರಾವಳಿಗೆ ಸಂಬಂಧಿಸಿದ ಅನೇಕ ವಸ್ತುಗಳಿವೆ. ಬಯಲಾಟ ಪರಂಪರೆಯು ವಿವಿಧ ಪ್ರಕಾರಗಳಾದ ತೆಂಕುತಿಟ್ಟು ಹಾಗೂ ಬಡಗು ತಿಟ್ಟುಗಳ ಪೂರ್ಣ ಪ್ರಮಾಣದ ವೇಷಗಳನ್ನು ಅಲ್ಲಿ ನೋಡಬಹುದಾಗಿದೆ. ಜತೆಗೆ, ದೊಡ್ಡಾಟ ಹಾಗೂ ಮೂಡಲಪಾಯಕ್ಕೆ ಸಂಬಂಧಿಸಿದ ಆಭರಣಗಳು, ಹಾಗೂ ವೇಷ ಭೂಷಣಗಳಿವೆ. ಆಂಧ್ರ ಪ್ರದೇಶದ ಯಕ್ಷಗಾನದ ಕೆಲವು ಪ್ರತಿಕೃತಿಗಳಿವೆ. ಕೇರಳದ ಕಥಕ್ಕಳಿ, ಕುಟಿಯಾಟ್ಟಂ, ಕೃಷ್ಣಾಟ್ಟಂ, ಓಟ್ಟಂತುಳ್ಳಲ್, ಮತ್ತು ಮೋಹಿನಿಯಾಟ್ಟಂಗೆ ಸಂಬಂಧಿಸಿದ ಅನೇಕ ವಸ್ತುಗಳಿವೆ. ತಮಿಳುನಾಡಿನ ತೆರುಕೂತ್ತು, ವಾರಣಾಸಿಯ ರಾಮ ಲೀಲಾ, ಮಥುರಾದ ರಾಸಲೀಲಾ, ಬಂಗಾಳದ ಚಾವು, ಜಾತ್ರಾ, ನೌಟಂಕಿ, ಕಾಶ್ಮೀರದ ಭಾಂಡ್ ಪಾಥರ್, ಹರಿಯಾಣದ ಸ್ವಾಂಗ, ರಾಜಸ್ಥಾನದ ಖ್ಯಾಲ, ಒರಿಸ್ಸಾದ 'ಒಡಿಸ್ಸಿ', ಹಾಗೂ ಮಧ್ಯಪ್ರದೇಶದ ಮಾಛಕ್ಕೆ ಸಂಬಂಧಿಸಿದ ಅನೇಕ ವಸ್ತುಗಳು ಇಲ್ಲಿದ್ದು ವಸ್ತು ಸಂಗ್ರಹಾಲಯದ ಮಹತ್ವವನ್ನು ಹೆಚ್ಚಿಸಿವೆ. ಭಾರತ ದೇಶದ ವಿವಿಧ ಭಾಗಗಳ ರಂಗಭೂಮಿಗೆ ಸಂಬಂಧಿಸಿದ ಹಾಗೇ ಇಲ್ಲಿ ದೊರಕುವಷ್ಟು ಮಾಹಿತಿಗಳು ಬೇರೆಲ್ಲೂ ದೊರೆಯುವುದಿಲ್ಲ.

ಕರಾವಳಿ ಭಾಗದ ಬೊಂಬೆಯಾಟಕ್ಕೆ ಅಂತಾರಾಷ್ಟ್ರೀಯ ಮನ್ನಣೆ ತಂದಿತ್ತ ಕಮಲಾದೇವಿಯವರು ಆ ಕಾಲದಲ್ಲಿ ಸಂಗ್ರಹಿಸಿದ ಅಪೂರ್ವ ಯಕ್ಷಗಾನ ಹಾಗೂ ತೊಗಲು ಬೊಂಬೆಗಳು ಇಲ್ಲಿವೆ. ಜತೆಗೆ, ರಾಜಸ್ಥಾನದ ಕಟ್‌ಪುತ್ಲಿ, ಒರಿಸ್ಸಾದ ಗೋಪ ಲೀಲಾ, ಆಂಧ್ರದ, ಬೊಮ್ಮಲಾಟಂ, ಕೇರಳದ ಪಾವಕಥಕಳಿ, ವಳ್ಳಿ ತಿರುಮಾನಂ, ಬಂಗಾಳದ ದಾಂಗೇರ್ ಪುತುಲ್, ಬೊಂಬೆಗಳನ್ನೂ ಇಲ್ಲಿ ಕಾಣಬಹುದು. ಕರಾವಳಿ ಭಾಗದ ಭೂತಾರಾಧನೆಗೆ ಸಂಬಂಧಿಸಿದ ಗಗ್ಗರ, ಮುಖವಾಡಗಳು, ಆಭರಣಗಳೂ, ಖಡ್ಗ, ಗುರಾಣಿ ಮುಂತಾದ ಆಯುಧಗಳೂ ಇಲ್ಲಿವೆ. ಜತೆಗೆ ಕೇರಳದ ತೆಯ್ಯಂಗೆ ಸಂಬಂಧಿಸಿದ ಅನೇಕ ವಸ್ತುಗಳಿವೆ, ಮುಖ್ಯವಾಗಿ ಮುಖವಾಡಗಳನ್ನು ಅಭ್ಯಾಸ ಮಾಡುವವರಿಗೆ ಇಲ್ಲಿ ಅಮೂಲ್ಯ ಮಾಹಿತಿಗಳಿವೆ.

ಕಮಲಾದೇವಿಯರು ಆರಂಭಿಸಿದ ಈ ಮ್ಯೂಸಿಯಂನ್ನು ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಕಾರ್ಯದರ್ಶಿಯಾಗಿದ್ದ ಶ್ರೀಮತಿ ಉಷಾ ಮಲ್ಲಿಕ್ ಅವರು ಈಗ ನೋಡಿಕೊಳ್ಳುತ್ತಿದ್ದಾರೆ. ರಾಜಧಾನಿಯಲ್ಲಿ ಕನ್ನಡಿಗರಿಬ್ಬರ ನೆನಪಲ್ಲಿ ಇರುವ ಈ ವಸ್ತು ಸಂಗ್ರಹಾಲಯಕ್ಕೆ ದಿಲ್ಲಿಗೆ ಆಗಮಿಸುವ ಕನ್ನಡಿಗರೆಲ್ಲ ಭೇಟಿ ನೀಡಬೇಕು.