Wednesday, January 4, 2012

ಕೇಂದ್ರ ಲಲಿತ ಕಲಾ ಅಕಾಡೆಮಿ ಹಂಗಾಮಿ ಅಧ್ಯಕ್ಷರಾಗಿ ಕೆ.ಆರ್. ಸುಬ್ಬಣ್ಣ ನೇಮಕ

ಕೇಂದ್ರ ಲಲಿತ ಕಲಾ ಅಕಾಡೆಮಿ ಹಂಗಾಮಿ ಅಧ್ಯಕ್ಷರಾಗಿ ಗ್ರಾಫಿಕ್ ಕಲಾವಿದ ಕನ್ನಡಿಗ ಕೆ.ಆರ್. ಸುಬ್ಬಣ್ಣ ನೇಮಕ ಗೊಂಡಿದ್ದಾರೆ.
ಅಕಾಡೆಮಿ ಅಧ್ಯಕ್ಷರಾಗಿದ್ದ ಅಶೋಕ್ ವಾಜಪೇಯಿ ಅವರ ನಿವೃತ್ತಿಯಿಂದ ತೆರವಾದ ಸ್ಥಾನಕ್ಕೆ ಸುಬ್ಬಣ್ಣ ನೇಮಕ ಗೊಂಡಿದ್ದಾರೆ. `ಕಲಾವಿದರ ಸಾಮಾನ್ಯ ಮಂಡಲಿ`ಯಿಂದ ಸುಬ್ಬಣ್ಣ ಅಕಾಡೆಮಿ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದರು. ಅಕಾಡೆಮಿ ಸಂವಿಧಾನದ ಅನ್ವಯ ಅವರೀಗ ಹಂಗಾಮಿ ಅಧ್ಯಕ್ಷರು. ಕೇಂದ್ರ ಸರ್ಕಾರ ಹೊಸ ಅಧ್ಯಕ್ಷರನ್ನು ನೇಮಕ ಮಾಡುವವರೆಗೆ ಅಧಿಕಾರದಲ್ಲಿ ಮುಂದುವರಿಯಲಿದ್ದಾರೆ.
ಸದ್ಯ ದೆಹಲಿ ಕನ್ನಡ ಶಾಲೆಯಲ್ಲಿ ಕಲಾ ಶಿಕ್ಷಕರಾಗಿರುವ ಸುಬ್ಬಣ್ಣ ಮೂಲತಃ ಶಿವಮೊಗ್ಗ ಜಿಲ್ಲೆ ಕುಪ್ಪಗಡ್ಡೆ ಗ್ರಾಮದವರು.
1984 ರಲ್ಲಿ ಲಲಿತ ಕಲಾ ಅಕಾಡೆಮಿಯ ರಾಷ್ಟ್ರ ಪ್ರಶಸ್ತಿ ಪಡೆದಿರುವ ಕೆ.ಆರ್‌. ಸುಬ್ಬಣ್ಣ ಅವರು 1978 ರಿಂದ ದೆಹಲಿ ವಾಸಿಯಾಗಿದ್ದು ದಾವಣಗೆರೆಯ ಕಲಾ ಶಾಲೆಯಿಂದ ಡಿಪ್ಲೊಮಾ; ದೆಹಲಿಯ ಕಾಲೇಜ್‌ ಆಫ್‌ ಆರ್ಟ್ಸನಿಂದ ಚಿತ್ರಕಲೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಭಾರತದ ಎಲ್ಲೆಡೆ ಇವರ ಕಲಾಕೃತಿಗಳು ಪ್ರದರ್ಶನಗೊಂಡಿದ್ದು ಮಾತ್ರವಲ್ಲದೆ ಫ್ರಾನ್ಸ್‌, ಇಂಗ್ಲೆಂಡ್‌, ದಕ್ಷಿಣ ಕೋರಿಯಾ, ಕೆನಡಾ, ನೇಪಾಲ, ಟೋಕಿಯೋ, ಡೆನ್ಮಾರ್ಕ್‌, ಸ್ವೀಡನ್‌, ಜರ್ಮನಿಗಳಲ್ಲಿ ಅವರ ಕೃತಿಗಳು ಪ್ರದರ್ಶನಗೊಂಡು ವಿಮರ್ಶಕರಿಂದ ಪ್ರಶಂಸಿಸಲ್ಪಟ್ಟಿವೆ. ಅಂತರಾಷ್ಟ್ರೀಯ ಗ್ರಾಫಿಕ್ಸ್‌ ಪ್ರಿಂಟ್ಸ್‌ ಪ್ರದರ್ಶನವನ್ನು ಅಮೇರಿಕದ ಮ್ಯಾನ್‌ ಹಟನ್‌ ಗ್ರಾಫಿಕ್‌ ಕಾರ್ಯಾಗಾರದಲ್ಲಿ 2004 ರ  ಫೆಬ್ರವರಿಯಲ್ಲಿ  ಸುಬ್ಬಣ್ಣನವರು ಅಯೋಜಿಸಿದ್ದರು.
ಕಲಾವಿದ ಸುಬ್ಬಣ್ಣ ಅವರು ದೇಶದ ನಾನಾ ಎಡೆಗಳಲ್ಲಿ ತರಬೇತಿ ಶಿಬಿರಗಳನ್ನು ಏರ್ಪಡಿಸಿ, ಹೊಸ ಕಲಾವಿದರನ್ನು ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿದ್ದಾರೆ. ಹಿತ್ತಲ ಗಿಡ ಮದ್ದಲ್ಲ ಎಂಬಂತೆ ದೆಹಲಿ ಕನ್ನಡಿಗರು ಸುಬ್ಬಣ್ಣ ಅವರನ್ನು ಗುರುತಿಸಿಕೊಂಡದ್ದು ಕಡಿಮೆಯಾದರೂ, ರಾಷ್ಟ್ರೀಯ ಹಾಗೂ ಅಂತರ್‌ ರಾಷ್ಟ್ರೀಯಮಟ್ಟದಲ್ಲಿ ಒಬ್ಬ ಮೇರುಮಟ್ಟದ ಕಲಾವಿದನಾಗಿ ಗುರುತಿಸಲ್ಪಟ್ಟಿದ್ದಾರೆ. ಕರ್ನಾಟಕ ರಾಜ್ಯ ಲಲಿತಕಲಾ ಅಕಾಡೆಮಿಯು ನಡೆಸಿದ 13ನೇ ವಾರ್ಷಿಕ ಕಲಾ ಪ್ರದರ್ಶನದಲ್ಲಿ ಇವರಿಗೆ ರಾಜ್ಯಪ್ರಶಸ್ತಿ ಸಂದಿದೆ. ಹೈದರಾಬಾದಿನಲ್ಲಿ ನಡೆದ ಏಳನೆಯ ಗ್ರಾಫಿಕ್‌ ಪ್ರದರ್ಶನದಲ್ಲಿ ವಾರ್ಷಿಕ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ. ಫ್ರಾನ್ಸ್‌ ಸರ್ಕಾರದ ಶಿಷ್ಯವೇತನ, ಭಾರತ ಸರಕಾರದ ಸಂಸ್ಕೃತಿ ಇಲಾಖೆಯ ಶಿಷ್ಯವೇತನ ಮತ್ತು ಬ್ರಿಟನ್ನಿನ ಚಾರ್ಲ್ಸ್‌ವೆಲೇಸ್‌ ಶಿಷ್ಯವೇತನಗಳು ಸುಬ್ಬಣ್ಣ ಅವರನ್ನು ತಾವಾಗಿಯೇ ಹುಡುಕಿಕೊಂಡು ಬಂದಿವೆ.
ದೆಹಲಿಯ ಏಕೈಕ ಕನ್ನಡದ ವಿದ್ಯಾಸಂಸ್ಥೆಯಾದ, ದೆಹಲಿ ಕನ್ನಡ ಶಾಲೆಯಲ್ಲಿ ಚಿತ್ರಕಲಾ ಅಧ್ಯಾಪಕರಾಗಿ ದುಡಿಯುತ್ತಿರುವ ಸುಬ್ಬಣ್ಣ, ಕೇಂದ್ರ ಲಲಿತಕಲಾ ಅಕಾಡೆಮಿಯ ಸದಸ್ಯರಾಗಿ, ಲಲಿತಕಲಾ ಅಕಾಡೆಮಿಯ ಹಣಕಾಸು ಸಮಿತಿಯ ಸದಸ್ಯರಾಗಿ, ಲಲಿತಕಲಾ ಅಕಾಡೆಮಿಯ ದೆಹಲಿ ವಲಯದ ಸಲಹಾಕಾರರಾಗಿ, ಇಂಡಿಯನ್‌ ಪ್ರಿಂಟ್‌ ಮೇಕರ್ಸ್‌ ಗಿಲ್ಡನ್‌ ಕಾರ್ಯದರ್ಶಿಯಾಗಿ ಇಂಗ್ಲೆಂಡ್‌ ಮತ್ತು ಡೆನ್ಮಾರ್ಕ್‌ ನಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಕಲಾಕೃತಿಗಳ ಬಗ್ಗೆ ಡಾಕ್ಯೂಮೆಂಟರಿ ಫಿಲ್ಮ್‌, ಭಾರತೀಯ ಮತ್ತು ಅಂತಾರಾಷ್ಟ್ರೀಯ ಕಿರುತೆರೆಯಲ್ಲಿ ಪ್ರಸಾರಗೊಂಡಿದೆ.
ದೆಹಲಿಯ ಲಲಿತ ಕಲಾ ಅಕಾಡೆಮಿ, ಬೆಂಗಳೂರಿನ ಲಲಿತಕಲಾ ಅಕಾಡೆಮಿ, ಹೈದರಾಬಾದಿನ ಲಲಿತಕಲಾ ಅಕಾಡೆಮಿ, ಮೈಸೂರಿನ ಜಾನಪದ ವಸ್ತುಸಂಗ್ರಹಾಲಯ, ನೇಪಾಲದ ಸೋಲಿಟಿ ಒಬೆರೈ, ಡೆನ್ಮಾರ್ಕಿನ ಡೆಟ್‌ಗ್ರಾಫಿಸ್ಕೆ ಹೀಗೆ ಹಲವೆಡೆ ಸುಬ್ಬಣ್ಣನವರ ಕಲಾಕೃತಿಗಳನ್ನು ಪ್ರದರ್ಶನಕ್ಕೆ ಇರಿಸಲಾಗಿದೆ.
ಚಿತ್ರಕಲೆಯಲ್ಲದೆ ಸುಬ್ಬಣ್ಣ ಅವರಿಗೆ ಸಂಗೀತ ಮತ್ತು ನಾಟಕಗಳಲ್ಲಿ ಕೂಡಾ ವಿಶೇಷ ಆಸಕ್ತಿ. ಬಿ.ವಿ.ಕಾರಂತರ ನಾಟಕಗಳು, ಹಾಗೂ ಇತರ ಹಲವು ನಾಟಕಗಳಲ್ಲಿ ಅಭಿನಯಿಸಿರುವದಲ್ಲದೇ ರಂಗದ ಹಿಂದೆ ಕೂಡಾ ಅಷ್ಟೇ ಪರಿಣಿತರು. ಮಕ್ಕಳಿಗಾಗಿ ರಂಗ ತರಬೇತಿ ಶಿಬಿರವನ್ನು ನಡೆಸಿ ಹಲವಾರು ಕಿರು ನಾಟಕಗಳನ್ನು ನಿರ್ದೇಶಿಸಿ ಪ್ರದರ್ಶಿಸಿದ್ದಾರೆ.

No comments:

Post a Comment