Thursday, February 3, 2011

ಕರ್ನಾಟಕ ಸುತ್ತಿ ಬಂದ ದಿನಕರ



ಜನವರಿ 28ರಿಂದ ಫೆಬ್ರವರಿ 1 ರ ತನಕ ದಿನಕರ (ದಿಲ್ಲಿ ನಗರ ಕನ್ನಡ ಕಲಾವಿದರ ರಂಗ, ನವದೆಹಲಿ) ತಂಡದಿಂದ ಕನ್ನಡ ನಾಡಿನ ನಾಲ್ಕು ಜಿಲ್ಲೆಗಳಲ್ಲಿ ನಾ ಸತ್ತಿಲ್ಲ! ನಾಟಕದ ಪ್ರಯೋಗಗಳು ಯಶಸ್ವಿಯಾಗಿ ನಡೆದವು. ಕರ್ನಾಟಕದ ಜಗತ್ಪ್ರಸಿದ್ಧ ಐತಿಹಾಸಿಕ ಆಕರ್ಷಣೆಯ ತಾಣವಾದ ಹಂಪಿಯಲ್ಲಿ ಹಂಪಿ ಉತ್ಸವದಲ್ಲಿ ಬೃಹತ್ ಬಂಡೆಕಲ್ಲುಗಳ ನೈಜ ಪರಿಸರದ ನಡುವೆ ಭವ್ಯವಾಗಿ ಅಣಿಗೊಳಿಸಲಾಗಿದ್ದ ಡಾ. ರಾಜ್‌ಕುಮಾರ್ ವೇದಿಕೆಯಲ್ಲಿ 28 ಜನವರಿಯಂದು ಪ್ರದರ್ಶನಗೊಂಡ ನಾ ಸತ್ತಿಲ್ಲ! ನಾಟಕ ಎರಡೂವರೆ ಸಾವಿರಕ್ಕೂ ಮಿಗಿಲಾಗಿ ನೆರೆದಿದ್ದ ಪ್ರೇಕ್ಷಕರ ಮನಗೆದ್ದಿತು. ಜಾತ್ರೆಯ ಸಡಗರದ ಸದ್ದು ಗದ್ದಲಗಳ ನಡುವೆಯೂ ಗ್ರಾಮೀಣ ಜನರೇ ಬಹಳವಾಗಿದ್ದ ಸಭಿಕರ ಎದುರು ಗಹನವಾದ ವಸ್ತುವನ್ನು ಒಳಗೊಂಡ ಈ ನಾಟಕ ಪ್ರೇಕ್ಷಕರ ಆಸಕ್ತಿಯನ್ನು ಹಿಡಿದಿಡುವಲ್ಲಿ ಸಫಲವಾಯಿತು. ಅಷ್ಟೇ ಅಲ್ಲದೆ ಪಾತ್ರಗಳೊಂದಿಗೆ ಪ್ರೇಕ್ಷಕರ ಸಂವಹನ ತಂಡದ ಉತ್ಸಾಹಕ್ಕೆ ಪೂರಕವಾಗಿತ್ತು.
ಕರ್ನಾಟಕದಲ್ಲಿ ಪ್ರದರ್ಶನಗೊಂಡ ನಾಟಕದ ದೃಶ್ಯ
ಇಂತಹ ಗಂಭೀರ ವಿಷಯ ಇರುವ ನಾಟಕವನ್ನು ದೂರದ ದೆಹಲಿಯಿಂದ ಬಂದು ನಮಗಾಗಿ ನೀಡಿದ್ದು ಶ್ಲಾಘನೀಯವೆಂದು ಈ ಸಂದರ್ಭದಲ್ಲಿ ಉಪಸ್ಥಿತರಿದ್ದ  ಕರ್ನಾಟಕ ನಾಟಕ ಅಕಾಡೆಮಿಯ ನರಸಿಂಹ ಮೂರ್ತಿ ಅವರು ಅಭಿಪ್ರಾಯಪಟ್ಟರು. ರಂಗಕರ್ಮಿ ಗುಬ್ಬಿ ಪ್ರಕಾಶ್, ಚಿಂದೋಡಿ ಶಂಭುಲಿಂಗಪ್ಪ ಹಾಗೂ ವಿವಿಧ ಕಲಾತಂಡಗಳ ಕಲಾವಿದರು ಕೂಡ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು.
ಜಗದ್ವಿಖ್ಯಾತ ಗೋಲಗೊಮ್ಮಟದ ಊರು ಬಿಜಾಪುರದಲ್ಲಿ ನಾ ಸತ್ತಿಲ್ಲ!ದ 4ನೇ ಪ್ರಯೋಗ ನಗರದ ಉಪ್ಪಲಿ ಬುರುಜದ ಸಮೀಪವಿರುವ ಬಿಡಿಇ ಸಂಸ್ಥೆಯ ಬಾಲಕಿಯರ ಮಾಧ್ಯಮಿಕ ಶಾಲೆಯ ಆವರಣದಲ್ಲಿ ನಡೆಯಿತು.  ಈ ಪ್ರದರ್ಶನಕ್ಕೆ ಬಿಜಾಪುರದ ಹಲವಾರು ಖ್ಯಾತ ವಕೀಲರು, ನ್ಯಾಯಾಧೀಶರು, ಉದ್ಯಮಿಗಳು ಹಾಗೂ ರಂಗಾಸಕ್ತರ ಸಮೂಹವೇ ಹಾಜರಿತ್ತು.  ಈ ನಾಟಕದ ಲೇಖಕರಾದ  ಕೃಷ್ಣ ಕೊಲ್ಹಾರ ಕುಲಕರ್ಣಿ ಅವರೂ ಸಹ ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಕಲಾವಿದರನ್ನು ಪ್ರೋತ್ಸಾಹಿಸಿದರು.  ಈ ಸಂದರ್ಭದಲ್ಲಿ ನಾಟಕದ ನಿರ್ದೇಶಕರಾದ ಶಿವಾನಂದ ಇಂಗಳೇಶ್ವರರನ್ನು ಬಿಡಿಇ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.
ವಿಶೇಷ ಸೀರೆಗಳಿಗೆ ಹೆಸರಾದ ಬಾಗಲಕೋಟ ಜಿಲ್ಲೆಯ ಇಳಕಲ್‌ನಲ್ಲಿ ಸ್ನೇಹರಂಗ ಸಂಸ್ಥೆಯ ಸಹಯೋಗದೊಂದಿಗೆ ಈ ನಾಟಕದ 5ನೇ ಪ್ರಯೋಗ ನಡೆಯಿತು. ಸ್ನೇಹರಂಗ ಕಳೆದ ಮೂರು ದಶಕಗಳಿಂದ ಅನೇಕ ಹವ್ಯಾಸೀ ರಂಗತಂಡಗಳಿಗೆ ವೇದಿಕೆ ಒದಗಿಸುತ್ತಾ ಪ್ರೋತ್ಸಾಹ ನೀಡುತ್ತಿದೆ.  ನಗರದ ಅನುಭವ ಮಂಟಪದಲ್ಲಿ ರಾತ್ರಿ 11ಕ್ಕೆ ಶುರುವಾದ ಈ ಪ್ರದರ್ಶನವನ್ನು ಅನೇಕ ಖ್ಯಾತ ಉದ್ಯಮಿಗಳು, ರಂಗಾಸಕ್ತರು ಮತ್ತು ಗಣ್ಯರು ಪಾಲ್ಗೊಂಡು ಸಭಾಂಗಣ ಕಿಕ್ಕಿರಿದು ತುಂಬಿತ್ತು.
ಪ್ರೇಕ್ಷಕ ವೃಂದ
ಬೆಂಗಳೂರಿನ ರಾಜಾಜಿನಗರದಲ್ಲಿರುವ ಶ್ರೀರಾಮ ಮಂದಿರದ ಸಭಾಂಗಣದಲ್ಲಿ ನಾ ಸತ್ತಿಲ್ಲ!ದ 6ನೇ ಪ್ರಯೋಗ ಅತ್ಯಂತ ಯಶಸ್ವಿಯಾಗಿ ನಡೆಯಿತು.
ದಿನಕರದ ಈ ಕರ್ನಾಟಕ ಪ್ರವಾಸದಲ್ಲಿ ದೆಹಲಿವಾಸಿ ಕನ್ನಡ ಕಲಾವಿದರುಗಳಾದ ಶಿವಾನಂದ ಇಂಗಳೇಶ್ವರ ಅವರು ನ್ಯಾಯಾಧೀಶನ ಪಾತ್ರ ವಹಿಸಿದರೆ, ಶ್ಯಾಮಸುಂದರ್ ಆರ್ ಎಸ್ ಸತ್ಯವಂತನ ಪಾತ್ರಕ್ಕೆ ಜೀವ ತುಂಬಿದರು.  ಹೆಚ್ ಕೆ ರವಿಕುಮಾರ್ ಹಾಗೂ  ಶ್ರೀನಿವಾಸ ಮೂರ್ತಿ ಡಿ ಎ ಅವರು ವಕೀಲರಾಗಿ ತಂತಮ್ಮ ಕಕ್ಷಿದಾರರನ್ನು ಸಮರ್ಥಿಸಿಕೊಂಡರೆ ಎಸ್ ಕುಮಾರ್ ಅವರು ಬೀರಪ್ಪನ ಪಾತ್ರದಲ್ಲಿ ಮಿಂಚಿದರು. ಬಿ ನಾರಾಯಣರವರು ಧನವಂತರಾವ್‌ನ ದರ್ಪ ತೋರಿಸಿದರೆ, ಎಸ್ ಎಸ್ ಗೋವಿಂದರಾಜು ಅವರು ಜವಾನನ ಪಾತ್ರದ ಹಾಗೂ ಮಲ್ಲನಗೌಡ ಬಿ ಎಸ್ ಅವರು ಬೆಂಚ್‌ಕ್ಲರ್ಕ್ ಪಾತ್ರದ ಶಿಸ್ತನ್ನು ಎತ್ತಿ ಹಿಡಿದರು. ಪ್ರಚಂಡಾಚಾರಿ ಪಾತ್ರವಹಿಸಿದ ಟಿ ಎಸ್ ರಮೇಶ್ ಅವರು ಪ್ರೇಕ್ಷಕರ ಮುಖದಲ್ಲಿ ನಗೆ ಮೂಡಿಸಲು ಕಾರಣರಾದರು. ಆಶಾ ಶ್ಯಾಮಸುಂದರ್ ಅವರು ರಂಗಸಜ್ಜಿಕೆ ನಿರ್ವಹಣೆಯಲ್ಲಿ ಸಹಕರಿಸಿದರು ಹಾಗೂ ಶಶಿಕಾಂತ ಪಾಟೀಲ ಪ್ರಸಾಧನದಲ್ಲಿ ನೆರವಿತ್ತರೆ ಬಿಜಾಪುರದಿಂದ ಜತೆಗೂಡಿದ  ಯೋಗೇಂದ್ರ ಸಿಂಗ್ ಅವರು ಈ ಎಲ್ಲಾ ಪ್ರದರ್ಶನಗಳಿಗೆ ಉತ್ತಮ ಬೆಳಕಿನ ವ್ಯವಸ್ಥೆ ಮಾಡಿದರು.
ದಿನಕರದ ಕರ್ನಾಟಕ ಪ್ರವಾಸ ಕನ್ನಡ ನಾಡಿನ ನಾಲ್ಕು ಬೇರೆ ಬೇರೆ ಜಿಲ್ಲೆಗಳಲ್ಲಿ ಪ್ರದರ್ಶನಗೊಂಡು ಅದ್ಭುತ ಯಶಸ್ಸನ್ನು ಪಡೆದು ಎಲ್ಲರಿಂದ ಮೆಚ್ಚುಗೆ ಗಳಿಸಿತಲ್ಲದೆ ದಿನಕರದ ಮುಂಬರುವ ನಾಟಕಗಳನ್ನು ತಮ್ಮೂರಿನಲ್ಲಿ ಪ್ರದರ್ಶನ ಮಾಡುವಂತೆ ಅನೇಕರ ಪ್ರೀತಿಯ ಒತ್ತಾಯವೂ ಬರುತ್ತಿದೆ ಎಂದು ಈ ಕರ್ನಾಟಕ ಪ್ರವಾಸದ ರೂವಾರಿ ಶಿವಾನಂದ ಇಂಗಳೇಶ್ವರ ಹೇಳಿದರು.
ಕೆಂಪುಕೋಟೆ

2 comments:

  1. dinakara hege desadadyanta pradarshana needali :)

    ReplyDelete
  2. Congratulations to 'Dinakara'. They made people in karnataka that there is talent in Horanada Kannadigaru and they deserve all encouragement from all concerned. Congrats to Sri Ingaleswar and the entire team.

    KM Kalymangi

    ReplyDelete