Monday, July 9, 2012

ಸಂಪಾಜೆ ಶೀನಪ್ಪ ರೈ ಅವರಿಗೆ ’ಯಕ್ಷ ಕಲಾನಿಧಿ’ ಪ್ರಶಸ್ತಿ ಪ್ರದಾನ


ಮಂಗಳೂರು : ಕೇಂದ್ರ ಸಾಹಿತ್ಯ ಹಾಗೂ ನಾಟಕ ಅಕಾಡೆಮಿಗಳ ಮೂಲಕ ಯಕ್ಷಗಾನ ಕಲೆಯ ಪ್ರಚಾರ ಹಾಗೂ ಪ್ರಗತಿಗೆ ಅಗತ್ಯ ನೆರವು ದೊರಕಿಸಲು ಪ್ರಯತ್ನಿಸುವುದಾಗಿ ರಾಜ್ಯ ಸರಕಾರದ ದಿಲ್ಲಿ ಪ್ರತಿನಿಧಿ ವಿ. ಧನಂಜಯ ಕುಮಾರ್ ಅವರು ಭರವಸೆ ನೀಡಿದ್ದಾರೆ.
ಅಕಾಡೆಮಿ ಆಫ್ ತೆಂಕುತಿಟ್ಟು ಯಕ್ಷಗಾನ ವತಿಯಿಂದ ನಗರದಲ್ಲಿ ರವಿವಾರ ಜರಗಿದ ಯಕ್ಷಗಾನ ಕಲಾವಿದ ಸಂಪಾಜೆ ಶೀನಪ್ಪ ರೈ ಅವರಿಗೆ ’ಯಕ್ಷ ಕಲಾನಿಧಿ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಯಾಗಿದ್ದರು.
ಯಕ್ಷಗಾನವನ್ನು ರಾಷ್ಟ್ರೀಯ ಕಲೆಯಾಗಿಸುವ ಮೊದಲ ಪ್ರಯತ್ನವಾಗಿ ದೇಶದ ಸಂಗೀತ ನಾಟಕ ಅಕಾಡೆಮಿಯಲ್ಲಿ ಯಕ್ಷಗಾನವನ್ನು ಪರಿಗಣಿಸುವಂತೆ ಮಾಡಬೇಕಾಗಿದೆ. ಆ ನಿಟ್ಟಿನಲ್ಲಿ ನಡೆಯುವ ಎಲ್ಲ ಪ್ರಯತ್ನಗಳಿಗೆ ದಿಲ್ಲಿಯಲ್ಲಿ ತಾವು ಸಂಪೂರ್ಣ ಬೆಂಬಲ ನೀಡುವುದಾಗಿ ಮಾಜಿ ಕೇಂದ್ರ ಸಚಿವ ಹಾಗೂ ಬಿಜೆಪಿ ಮುಖಂಡ ವಿ. ಧನಂಜಯ ಕುಮಾರ್ ಹೇಳಿದರು. ಪುರಾಣ, ಧಾರ್ಮಿಕ ವ್ಯವಸ್ಥೆ, ರಾಮಾಯಣ, ಮಹಾಭಾರತದ ಪಾತ್ರಗಳ ಪರಿಣಾಮಕಾರಿ ದರ್ಶನ ಯಕ್ಷಗಾನದಿಂದ ಸಾಧ್ಯವಾಗುತ್ತದೆ. ಈ ಮೂಲಕ ಈ ಕಲೆ ಪರಿಣಾಮಕಾರಿ ಮಾಧ್ಯಮವೂ ಆಗಿದೆ ಎಂದರು.
ಅವರು ಹೊಸದಿಲ್ಲಿಯ ಅಕಾಡೆಮಿ ಆಫ್ ತೆಂಕುತಿಟ್ಟು ಯಕ್ಷಗಾನ ವತಿಯಿಂದ ಸಂಪಾಜೆ ಶೀನಪ್ಪ ರೈಗಳಿಗೆ ಯಕ್ಷಕಲಾ ನಿಧಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು. 
ಕಾವ್ಯ, ಗದ್ಯ ಮತ್ತು ಅಭಿನಯವನ್ನು ಒಳಗೊಂಡಿರುವ ಯಕ್ಷಗಾನ ದೇಶದ ಪ್ರಾತಿನಿಕ ಕಲೆ ಎಂಬುದರಲ್ಲಿ ಎರಡು ಮಾತಿಲ್ಲ. ಹಿಂದಿನ ಕಾಲದಲ್ಲಿ ಹಳ್ಳಿಗಳಲ್ಲಿ ಯಕ್ಷಗಾನವೇ ಮನರಂಜನೆಯ ವಿಷಯವಾಗಿತ್ತು. ಇಂದು ಮನರಂಜನೆಯ ಮಾಧ್ಯಮಗಳು ಹೆಚ್ಚಾಗಿದ್ದರೂ ಯಕ್ಷಗಾನಕ್ಕೆ ತನ್ನದೇ ಆಸ್ತಿತ್ವ ಇದೆ ಎಂದು ಅವರು ಅಭಿಪ್ರಾಯಪಟ್ಟರು. 
ಮಂಗಳೂರು ವಿಶ್ವವಿದ್ಯಾಲಯದ ಕುಲಸಚಿವ ಡಾ. ಕೆ. ಚಿನ್ನಪ್ಪ ಗೌಡ ಮಾತನಾಡಿ, ಗಡಿ, ಭಾಷೆ ಮತ್ತು ಶೈಲಿಯ ಗಡಿಗಳನ್ನು ದಾಟಲು ಪ್ರಯತ್ನಿಸುತ್ತಿರುವ ಯಕ್ಷಗಾನ ಪರಂಪರೆಯನ್ನು ಮೀರುವುದು ಸರಿಯಲ್ಲ. ಪ್ರಾಯೋಗಿಕವಾಗಿ ಹತ್ತಾರು ಪ್ರಯತ್ನಗಳು ನಡೆದಲ್ಲಿ ಅದನ್ನು ಒಪ್ಪಬಹುದು. ಆದರೆ ಒಟ್ಟು ಪ್ರದರ್ಶನ ಪ್ರೇಕ್ಷಕನಿಗೆ ಯಕ್ಷಗಾನ ಅಂತ ಅನಿಸಬೇಕು ಎಂದು ಚಿನ್ನಪ್ಪ ಗೌಡರು ಹೇಳಿದರು. ಮಂಗಳೂರು ವಿ.ವಿ. ಕುಲಸಚಿವ ಡಾ| ಚಿನ್ನಪ್ಪ ಗೌಡ ಅಧ್ಯಕ್ಷತೆ ವಹಿಸಿ, ಭಾರತೀಯ ವಿಜ್ಞಾನ ಸಂಸ್ಥೆಯ ಮಾದರಿಯಲ್ಲಿ ಯಕ್ಷಗಾನಕ್ಕೆ ಪ್ರತ್ಯೇಕ ಅಧ್ಯಯನ ಸಂಸ್ಥೆಯ ಅಗತ್ಯವಿದೆ. ಯಕ್ಷಗಾನ ಮೂಲ ಸ್ವರೂಪದಲ್ಲಿ ಉಳಿಯಲು ಯಕ್ಷಗಾನ ಕಲಾ ಪ್ರದರ್ಶನಗಳ ದಾಖಲೀಕರಣ ಅಗತ್ಯ ಎಂದರು. ಮಂಗಳೂರು ವಿಶ್ವವಿದ್ಯಾಲಯದಲ್ಲಿ ಇರುವ ಯಕ್ಷಗಾನ ಅಧ್ಯಯನ ಕೇಂದ್ರವನ್ನು ಅಭಿವೃದ್ಧಿ ಪಡಿಸುವ ಉದ್ದೇಶ ವಿವಿಗೆ ಇದೆ. ಸೌಂಡ್ ಆರ್ಕೈವ್ ಸಿದ್ಧಪಡಿಸುವ, ತರಬೇತಿ ಕೇಂದ್ರವನ್ನು ಇನ್ನಷ್ಟು ಪರಿಪೂರ್ಣಗೊಳಿಸುವ ಪ್ರಯತ್ನಗಳು ಸಾಗಿವೆ. ಆದರೆ ಇದೆಲ್ಲದರ ಹೊರತಾಗಿ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಮಾದರಿಯಲ್ಲಿ ಯಕ್ಷಗಾನ ಅಧ್ಯಯನ ಸಂಸ್ಥೆಯನ್ನೂ ಸರಕಾರ ಸ್ಥಾಪಿಸಲು ಮುಂದಾಗಬೇಕು. ಅದರಿಂದ ಸಂಶೋಧನಾತ್ಮಕ ಕೆಲಸಗಳಿಗೆ ಅನುಕೂಲವಾಗುತ್ತದೆ ಎಂದರು. 
ರಾಷ್ಟ್ರೀಯ ಮಟ್ಟದಲ್ಲಿ ಯಕ್ಷಗಾನವನ್ನು ಪ್ರತಿಪಾದಿಸುವಾಗ ಅದಕ್ಕೆ ಪೂರಕವಾದ ದಾಖಲೀಕರಣದ ಅವಶ್ಯಕತೆ ಇದೆ. ನಮ್ಮ ನಡುವಿನ ಹಿರಿಯ ಕಲಾವಿದರ ಕಲಾತ್ಮಕತೆಯನ್ನು, ವಿಭಿನ್ನತೆಯನ್ನು ನಾವು ಬರಿಯ ಮಾತಿನಲ್ಲಿ ಮಾತ್ರವೇ ಇತರರಿಗೆ ದಾಟಿಸುವುದು ಸಾಧ್ಯವಿಲ್ಲ. ಹಾಗಾಗಿ ಯಕ್ಷಗಾನ ಪ್ರದರ್ಶನಗಳ, ಕಲಾವಿದ ಕೇಂದ್ರೀಕೃತ ಅಧ್ಯಯನ ಮತ್ತು ಯಕ್ಷಗಾನದ ಪೂರಕ ವಿಚಾರಗಳ ಸಂರಕ್ಷಣೆಯಾಗುವ ಅಗತ್ಯವಿದೆ ಎಂದು ಅವರು ವಿವರಿಸಿದರು. 
ಅಭಿನಂದನಾ ಭಾಷಣ ನಡೆಸಿದ ಕೆ. ಗೋವಿಂದ ಭಟ್, ಸರಳ ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದ ಶೀನಪ್ಪ ರೈ ಅವರು ರಂಗಸ್ಥಳದಲ್ಲಿ ಪಾತ್ರದ ಗೌರವಕ್ಕೆ ತಕ್ಕುದಾದ ಮಾತು, ಅಭಿನಯ ತೋರಿದವರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವಿಶ್ವದಲ್ಲೇ ಅತೀ ದೀರ್ಘವಾದ ರಂಗಭೂಮಿಯಾಗಿರುವ ಯಕ್ಷಗಾನಕ್ಕೆ ಯುನೆಸ್ಕೋ ಮನ್ನಣೆ ಸಿಗುವ ನಿಟ್ಟಿನಲ್ಲಿ ಪ್ರಯತ್ನವಾಗಬೇಕು. ರಾತ್ರಿ ಇಡೀ ಅಂದರೆ ಸುಮಾರು ೮ ಗಂಟೆಗಳ ಕಾಲ ಒಂದು ಪ್ರದರ್ಶನವನ್ನು ನೀಡುವ ಕಲೆ ವಿಶ್ವದಲ್ಲೇ ಇಲ್ಲ. ಹಾಗಾಗಿ ಈ ನಿಟ್ಟಿನಲ್ಲಿ ಪ್ರಯತ್ನವಾಗಬೇಕು ಎಂದು ಅಕಾಡೆಮಿಯ ನಿರ್ದೇಶಕ ಸರವು ಕೃಷ್ಣಭಟ್ ಹೇಳಿದರು. ಸನ್ಮಾನ ಸ್ವೀಕರಿಸಿದ ಶೀನಪ್ಪ ರೈಗಳು ಇದು ತಮ್ಮ ಕಲಾಸೇವೆಗೆ ಕಟೀಲು ದೇವಿ ನೀಡಿದ ಪ್ರಸಾದ ಎಂದು ಹೇಳಿದರು. ವಿದ್ಯಾ ಕೋಳ್ಯೂರು ಸ್ವಾಗತಿಸಿದರು. ಹರಿಕೃಷ್ಣ ಪುನರೂರು, ಕುಂಬಳೆ ಸುಂದರ ರಾವ್ ಉಪಸ್ಥಿತರಿದ್ದರು. 

No comments:

Post a Comment