Monday, August 27, 2012

ಅಮೇರಿಕಾದ ಹಲವಾರು ನಗರಗಳಲ್ಲಿ ತೆಂಕುತಿಟ್ಟು ಯಕ್ಷಗಾನದ ಪ್ರದರ್ಶನ

2005ರಿಂದ ಹಿಂದೀ ಮತ್ತು ಕನ್ನಡ ಯಕ್ಷಗಾನಗಳ ಮೂಲಕ ದೇಶದ 19ರಾಜ್ಯಗಳಲ್ಲಿ, 300 ಕ್ಕೂ ಹೆಚ್ಚಿನ ಪ್ರದರ್ಶನಗಳನ್ನು
ನಡೆಸಿದ ಯಕ್ಷ ಮಂಜೂಷ ತಂಡ, ಈ ವರ್ಷ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಯಕ್ಷೋತ್ಸವವನ್ನು ಆಯೋಜಿಸಿದೆ. ಆಗಸ್ಟ್
30ರಿಂದ ಅಕ್ಟೋಬರ್ 29ರ ತನಕ, ಅಂದರೆ, ಎರಡು ತಿಂಗಳ ಕಾಲ ಅಮೇರಿಕಾದಲ್ಲೆಲ್ಲಾ ತಿರುಗಾಟ ನಡೆಸುವ
ಯಕ್ಷಮಂಜೂಷದ ಮೊದಲ ಪ್ರದರ್ಶನ ನಡೆಯುವುದು ಅಟ್ಲಾಂಟಾದಲ್ಲಿ.
ಆಗಸ್ಟ್ 31ರಿಂದ ಸೆಪ್ಟಂಬರ್ 2ರ ತನಕ ನಡೆಯಲಿರುವ ‘ಅಕ್ಕಾ’ದ ವಿಶ್ವ ಕನ್ನಡ ಸಮ್ಮೇಳನದಲ್ಲಿ ತೆಂಕುತಿಟ್ಟು ಯಕ್ಷಗಾನದ ಪ್ರದರ್ಶನ ನೀಡಲಿರುವ ಶ್ರೀಮತಿ ವಿದ್ಯಾ ಕೋಳ್ಯೂರು ನೇತೃತ್ವದ ಯಕ್ಷ ಮಂಜೂಷ ತಂಡ, ತದನಂತರ, ಅಮೇರಿಕಾದಲ್ಲಿ ವಾಸ್ತವ್ಯವಿರುವ ಎರಡು ತಿಂಗಳ ಅವಧಿಯಲ್ಲಿ ಸುಮಾರು 10 ನಗರಗಳಲ್ಲಿ ತೆಂಕುತಿಟ್ಟು ಶೈಲಿಯ ಯಕ್ಷಗಾನ ಪ್ರದರ್ಶನಗಳನ್ನು ನಡೆಸಲಿದೆ. ತೆಂಕುತಿಟ್ಟು ಯಕ್ಷಗಾನದ ಇತಿಹಾಸದಲ್ಲಿ, ಅಮೇರಿಕಾದಲ್ಲಿ ಹಲವಾರು ಕಡೆ ಪ್ರದರ್ಶನ ನೀಡಿದ ಮೊಟ್ಟಮೊದಲ ವೃತ್ತಿಪರ ತಂಡ ಇದಾಗಲಿದೆ.
ಅಟ್ಲಾಂಟಾ, ರ್ಯಾಲಿ, ರಿಚ್‌ಮಂಡ್, ನ್ಯೂಜರ್ಸಿ, ನ್ಯೂಯಾರ್ಕ್, ಬಾಸ್ಟನ್, ಕ್ಯಾಲಿಫೋರ್ನಿಯಾಗಳಲ್ಲಿ ಈಗಾಗಲೇ ಕಾರ್ಯಕ್ರಮಗಳು ನಿಗದಿತವಾಗಿದ್ದು, ಇನ್ನೂ ಹಲವಾರು ನಗರಗಳಲ್ಲಿ ತೆಂಕುತಿಟ್ಟು ಯಕ್ಷಗಾನ ಪ್ರದರ್ಶನಗಳು ನಡೆಯಲಿವೆ.
ಆಗಸ್ಟ್ 31ರಿಂದ ಅಕ್ಟೋಬರ್ 29ರ ತನಕ ಅಮೇರಿಕಾದಲ್ಲಿರುವ ಯಕ್ಷಮಂಜೂಷ, ತೆಂಕುತಿಟ್ಟು ಯಕ್ಷಗಾನದ ಪ್ರಚಾರ-
ಪ್ರಸಾರದ ಪ್ರತಿಯೊಂದು ಅವಕಾಶಗಳನ್ನು ಸಹ  ಬಳಸಿಕೊಳ್ಳಲಿದೆ. ಅಂತರರಾಷ್ಟ್ರೀಯ ದೇಶಗಳೊಡನೆ ಸಾಂಸ್ಕೃತಿಕ
ಸಂಬಂಧವೇರ್ಪಡಿಸುವುದಕ್ಕಾಗಿಯೇ ಭಾರತದ ವಿದೇಶಾಂಗ ವ್ಯವಹಾರ ಖಾತೆಯ, ಸಾಂಸ್ಕೃತಿಕ ಸಂಬಂಧಗಳಿಗಾಗಿರುವ
ಭಾರತೀಯ ಮಂಡಳಿ (Indian Council for Cultural Relations -ICCR) ಯಕ್ಷಮಂಜೂಷದ 10ಮಂದಿ ಕಲಾವಿದರನ್ನು  ಮಂಗಳೂರಿನಿಂದ ಕಳುಹಿಸಿಕೊಡುವ ಹಾಗೂ ಕರೆತರುವ ಪ್ರಯಾಣ ವೆಚ್ಚವನ್ನು ಪ್ರಾಯೋಜಿಸಿ ಈ ಅಭಿಯಾನದ  ಹೊರೆಯನ್ನು ಹೊತ್ತುಕೊಂಡಿದೆ. ಯಕ್ಷಗಾನದ ಸಾಗರೋಲ್ಲಂಘನಕ್ಕಾಗಿ ಕರ್ನಾಟಕ ನಾಟಕ ಅಕಾಡೆಮಿಯ ಮಾಜಿ ಅಧ್ಯಕ್ಷ ಶ್ರೀ ಶ್ರೀನಿವಾಸ ಜಿ ಕಪ್ಪಣ್ಣನವರು ಆಮಂತ್ರಣ ಇತ್ತು ಮಾರ್ಗದರ್ಶನ ಮಾಡಿದ್ದಾರೆ.
ಶ್ರೀಮತಿ ವಿದ್ಯಾ ಕೋಳ್ಯೂರವರ ನೇತೃತ್ವದಲ್ಲಿ ಅಮೇರಿಕಾ ಪ್ರವಾಸ ಕೈಗೊಳ್ಳುತ್ತಿರುವ ಈ ತಂಡದಲ್ಲಿ, ಸರವು ಕೃಷ್ಣ
ಭಟ್ ನಿರ್ವಹಣೆಯನ್ನು ನೋಡಿಕೊಳ್ಳುತ್ತಾರೆ. ಭಾಗವತರಾಗಿ ತೆಂಕುತಿಟ್ಟಿನ ಜನಪ್ರಿಯ ಪ್ರಾತಿನಿಧಿಕ ಭಾಗವತ ಶ್ರೀ ಪುತ್ತಿಗೆ
ರಘುರಾಮ ಹೊಳ್ಳರು, ಮದ್ದಳೆ ವಾದಕರಾಗಿ ಪಳಗಿದ ಕೈಯೆಂದೇ ಜನಪ್ರಿಯರಾಗಿರುವ ಶ್ರೀ ಪದ್ಯಾಣ ಜಯರಾಮ ಭಟ್,
ಚೆಂಡೆ ವಾದಕರಾಗಿ ಉದಯೋನ್ಮುಖ ಕಲಾವಿದ ಪದ್ಯಾಣ ಚೈತನ್ಯ ಕೃಷ್ಣ ಭಾಗವಹಿಸಲಿದ್ದಾರೆ.
ಮುಮ್ಮೇಳದಲ್ಲಿ, ಸುಪ್ರಸಿದ್ಧ ಪುಂಡುವೇಷಧಾರಿ ಶ್ರೀ ಚಂದ್ರಶೇಖರ ಧರ್ಮಸ್ಥಳ, ಹಾಸ್ಯಗಾರರಾಗಿ ಶ್ರೀ ಧರ್ಮಸ್ಥಳ
ಮೇಳದ ಹಾಸ್ಯಗಾರ ಶ್ರೀ ಮಹೇಶ ಮಣಿಯಾಣಿ, ಬಣ್ಣದ ವೇಷಧಾರಿಯಾಗಿ ತೆಂಕುತಿಟ್ಟಿನ ಇನ್ನೋರ್ವ ಸುಪ್ರಸಿದ್ಧ ಕಲಾವಿದ ಶ್ರೀ ಹರಿನಾರಾಯಣ ಭಟ್ ಎಡನೀರು, ಹಾಗೂ ಕಟೀಲು ಶ್ರೀ ದುರ್ಗಾಪರಮೇಶ್ವರೀ ಮೇಳದ ಜನಪ್ರಿಯ ಯುವ
ಕಲಾವಿದರುಗಳಾದ ಪ್ರಶಾಂತ ಶೆಟ್ಟಿ ನೆಲ್ಯಾಡಿ, ಹಾಗೂ ಬೆಳ್ಳಿಪ್ಪಾಡಿ ಮೋಹನ ಈ ತಂಡದಲ್ಲಿ ಭಾಗವಹಿಸುತ್ತಿದ್ದಾರೆ. ಅಕ್ಟೋಬರ್ 31ರಂದು ಮುಂಜಾನೆ ಈ ತಂಡ ಮರಳಿ ತವರೂರಿಗ ಬರಲಿದೆ.
 

1 comment:

  1. Yakshagana is a multicolour performance, but these performer are single coloured. Good luck for he team

    ReplyDelete