Friday, February 11, 2011

"ಮುಂಬಯಿ ಕರ್ನಾಟಕದಲ್ಲಿ ಸವಿನಯ ಕಾನೂನು ಭಂಗ ಚಳವಳಿ"

ದೆಹಲಿಯ ನ್ಯಾಷನಲ್ ಆರ್ಕೈವ್ ಆಫ್ ಇಂಡಿಯಾದಲ್ಲಿ ಉದ್ಯೋಗದಲ್ಲಿರುವ ಡಾ. ಜಿ.ಎ.ಬಿರಾದಾರ ಅವರ  ಮುಂಬಯಿ ಕರ್ನಾಟಕದಲ್ಲಿ ಸವಿನಯ ಕಾನೂನು ಚಳವಳಿ ಕೃತಿಯನ್ನು ಮೈಸೂರಿನ ಅಭಿರುಚಿ ಪ್ರಕಾಶನ ಪ್ರಕಟಿಸಿದೆ. ಕರ್ನಾಟಕ ಸರದಾರ ಪಟೇಲ ಚೆನ್ನಬಸಪ್ಪ ಅಂಬಲಿ ಎಂಬುದು ಬಿಜಾಪುರ ಜಿಲ್ಲೆಯ ಗೋಲಗೇರಿಯ ಡಾ. ಬಿರಾದಾರ ಅವರ ಇನ್ನೊಂದು ಕೃತಿ. ಕನ್ನಡ ಮತ್ತು ಇಂಗ್ಲೀಷ್‍ನಲ್ಲಿ ಸುಮಾರು ೧೫ಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನು ಪ್ರಕಟಿಸಿರುವ ಇವರು Mahatma Gandhi's Anti Untouchability Movement in Karnataka ಎಂಬ ಕೃತಿಯ ಪ್ರಕಟಣಾ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಮುಂಬಯಿ ಕರ್ನಾಟಕದಲ್ಲಿ ಸವಿನಯ ಕಾನೂನು ಚಳವಳಿ ಕೃತಿಯ ಒಂದು ಪರಿಚಯ ಕೆಂಪುಕೋಟೆ ಓದುಗರಿಗೆ.

ಭಾರತ ದೇಶ ಸ್ವತಂತ್ರವಾಗಿ ಆರು ದಶಕಗಳ ಮೇಲಾಗಿದೆ. ದೇಶಕ್ಕೆ ಸ್ವತಂತ್ರ ತರಲು ಹೋರಾಡಿದ ತಲೆಮಾರು ಮರೆಯಾಗಿದೆ. ಇಂದು ಭಾರತ ಒಂದು ಜಾಗತಿಕ ಶಕ್ತಿಯಾಗಿ ಬೆಳೆಯುತ್ತಿದೆ ಎಂಬ ಮನೋಭಾವನೆ ಹೊಸ ತಲೆಮಾರಿನಲ್ಲಿದೆ. ಜಾಗತಿಕ ಶಕ್ತಿಯಾಗುವ ಭಾರತದ ಮಹತ್ವಾಕಾಂಕ್ಷೆಗಳು ಮತ್ತು ಕನಸುಗಳು ನನಸಾಗುವಂತಹ ಮಹತ್ಕಾರ್ಯಗಳನ್ನು ನಿರ್ವಹಿಸಲು ಹೊಸ ತಲೆಮಾರು ಸಜ್ಜಾಗುತ್ತಿದೆ. ಇಂತಹ ಸಂದರ್ಭದಲ್ಲಿ ಮುಂಬಯಿ ಕರ್ನಾಟಕದಲ್ಲಿ ಸವಿನಯ ಕಾನೂನು ಚಳವಳಿ ಎಂಬ ಕೃತಿಯನ್ನು ಡಾ. ಜಿ.ಎ.ಬಿರಾದಾರ ಅವರು ಬರೆದಿದ್ದಾರೆ.

ಹಲವು ರಾಜ್ಯಗಳ ಒಕ್ಕೂಟವಾದ ಭಾರತ ದೇಶದ ಸ್ವಾತಂತ್ರ್ಯ ಚಳುವಳಿ ಸುಲಭ ಸಾಧ್ಯವಾಗಿಲ್ಲ. ಇತಿಹಾಸದ ಪುಟಗಳು ತಿಳಿಸುವ ಹೋರಾಟದ ವಿವರಗಳು ನಮ್ಮನ್ನು ಭಾವಾತಿರೇಕಕ್ಕೆ ಎಳೆದೊಯ್ಯುತ್ತವೆ. ಡಾ. ಜಿ.ಎ. ಬಿರಾದಾರ ಅವರ ಈ ಕೃತಿಯು ಕೂಡಾ ದೇಶಾಭಿಮಾನದ ಕಿಚ್ಚನ್ನು ನಮ್ಮೊಳಗೆ ಹಚ್ಚುತ್ತದೆ.

ಇಪ್ಪತ್ತನೇ ಶತಮಾನದ ಮೊದಲಭಾಗದಿಂದ ಆರಂಭಗೊಂಡ ಕಾನೂನು ಭಂಗ ಚಳುವಳಿಯ ಪ್ರತಿಯೊಂದು ಅಂಶವನ್ನು ಸಂಶೋಧಿಸಿ, ಆಕಾರಗ್ರಂಥಗಳ ಪ್ರಮಾಣವಾಗಿ ವಿವರಗಳನ್ನು ಬಿಚ್ಚುತ್ತಿರುವ ಈ ಕೃತಿಯು ಕೇವಲ ಇತಿಹಾಸದ ಆಸಕ್ತರಿಗೆ ಮಾತ್ರವಲ್ಲ ಸಾಮಾನ್ಯ ಓದುಗನಿಗೂ ಆಸಕ್ತಿದಾಯಕವಾಗಿದೆ. ಇತಿಹಾಸದ ವಿದ್ಯಾರ್ಥಿಗೆ ಮಾತ್ರ ಖಂಡಿತವಾಗಿಯೂ ಇದೊಂದು ಆಕಾರಗ್ರಂಥವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

ಸಾಮಾನ್ಯವಾಗಿ ಇತಿಹಾಸದ ಪುಸ್ತಕಗಳಲ್ಲಿ ವಿವಿಧ ಘಟನೆಗಳ ಮೇಲ್ನೋಟದ ವಿವರಗಳಿರುತ್ತವೆ. ಆದರೆ ಡಾ. ಬಿರಾದಾರ ಅವರು  ತಮ್ಮ ಕೃತಿಯಲ್ಲಿ ಪ್ರತಿಯೊಂದು ಹೋರಾಟದ ವಿಶಾಲವಾದ ವಿವರಣೆಗಳನ್ನು, ಒಕ್ಕಣಿಕೆಗಳನ್ನು ಮತ್ತು ಪುರಾವೆಗಳನ್ನು ಒದಗಿಸುತ್ತಾ ಚಳುವಳಿಯ ಸಂಕೀರ್ಣತೆಯ ಒಂದೊಂದೇ ಎಳೆಗಳನ್ನು ಬಿಡಿಸುತ್ತಾ ಹೋಗುತ್ತಾರೆ.

ಸ್ವಾತಂತ್ರ್ಯ ಹೋರಾಟದ ವಿವರಗಳೊಂದಿಗೆ ಕೃತಿಯುದ್ದಕ್ಕೂ ಸ್ವಾತಂತ್ರ್ಯ ಪೂರ್ವದ ಸಾಮಾಜಿಕ ಗೊಂದಲಗಳು, ಆರ್ಥಿಕ ಪರಿಸ್ಥಿತಿಯ ತೊಡಕುಗಳು, ಧಾರ್ಮಿಕ ಆಚರಣೆಗಳ ವಿಕಲ್ಪಗಳು ಮತ್ತು ರಾಜಕೀಯ ಚಟುವಟಿಕೆಗಳ ಅಪಕ್ವ ಅನುಭವಗಳು ದೊರೆಯುತ್ತವೆ. ರಾಷ್ಟ್ರ ಮಟ್ಟದಲ್ಲಿ ದಾಖಲಾದ ಸ್ವಾತಂತ್ರ್ಯ ಹೋರಾಟಗಾರರ ಜತೆಗೆ ಮುಂಬಯಿ ಕರ್ನಾಟಕದ ಜಿಲ್ಲಾ, ತಾಲೂಕು ಮತ್ತು ಗ್ರಾಮ ಮಟ್ಟದ ವ್ಯಕ್ತಿಗಳು ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ನೀಡಿದ ಕೊಡುಗೆಯ ಕುರಿತು ವಿವರಗಳು ಲಭಿಸುತ್ತವೆ.

ಈ ಕೃತಿಯ ಮುಕುಟಕ್ಕೆ ಗರಿಯಾಗಿ ಹಿರಿಯ ವಿಮರ್ಶಕ ಡಾ. ಪುರುಷೋತ್ತಮ ಬಿಳಿಮಲೆ ಅವರು ಮುನ್ನುಡಿ ಬರೆದಿದ್ದಾರೆ.  ಕೃತಿಯು ಸವಿನಯ ಕಾನೂನುಭಂಗ ಚಳುವಳಿಯ ಚಾರಿತ್ರಿಕ ವಿವರಗಳನ್ನು ನೀಡುವುದರ ಜೊತೆಗೆ ಈ ಚಳುವಳಿಯು ಎದುರಿಸುತ್ತಿದ್ದ ಆಂತರಿಕ ಸಮಸ್ಯೆಗಳನ್ನು ಹಾಗೂ ಆ ಆಂತರಿಕ ಸಮಸ್ಯೆಗಳನ್ನು ನಮ್ಮ ಚಳುವಳಿಗಾರರು ಬಗೆಹರಿಸಿಕೊಂಡ ಬಗೆಯನ್ನು ಸೂಕ್ಷ್ಮವಾಗಿ ದಾಖಲಿಸುತ್ತಿದೆ ಎಂಬುದು ನಮಗಿಂದು ಮುಖ್ಯವಾದ ವಿಚಾರವಾಗಿದೆ ಎಂದು ಡಾ. ಬಿಳಿಮಲೆ ಅವರು ಹೇಳುತ್ತಾರೆ.
ಕೆಂಪುಕೋಟೆ

1 comment:

  1. The subject chosen by Dr.GA Biradar is very interesting. The cover page is very attractive. As per the details given in the blog, and by the words of Dr.Bilimale in Munnudi the book the subject chosen by Dr.GA Biradar is very interesting. I am eager to read this book. Hearty congrats to Dr.GA Biradar for giving readers such a valuable book.

    KM Kalumangi

    ReplyDelete